ಕನ್ಯೆಗಳು ಕಾಣೆಯಾಗಿವೆ

ಒಮ್ಮೆ ನೈಮಿಷವೆಂಬ ಅರಣ್ಯದಲ್ಲಿ ವಾಸಿಸುವ ಶೌನಕರು, ೠಷಿ-ಮುನಿಗಳು ಭರತ ಖಂಡದ ಬ್ರಾಹ್ಮಣ ವರಗಳ ದಯನೀಯ ಸ್ಥಿತಿಯನ್ನು ಕುರಿತು, ಪುರಾಣಗಳನ್ನು ಬಲ್ಲ ಮಹಾ ತೇಜಸ್ವಿಯೂ, ಮಹಾಕೀರ್ತಿವಂತನೂ, ಶ್ರೀಮನ್ ನಾರಾಯಣನ ಭಕ್ತನೂ ಆದ ನಾರದನನ್ನೂ ಕುರಿತು ಬ್ರಾಹ್ಮಣ ವರಗಳ ಹಿತಾರ್ಥವಾಗಿ ಪ್ರಶ್ನೆ ಮಾಡಿದರು.
” ಎಲೈ ಮುನಿಯೆ! ಕಲಿಯುಗದ ಬ್ರಾಹ್ಮಣ ವರಗಳ ಕನ್ಯಾ ಬಯಕೆಯು ಅದಾವ ವ್ರತದಿಂದ ಇಲ್ಲವೇ ಆದಾವ ತಪಸ್ಸಿನಿಂದ ಈಡೇರುವವು?”
ಆಗ ನಾರದ ಮಹರ್ಷೀಯೂ “ಏಲೈ ಋಷಿಗಳೇ! ಇದೇ ಪ್ರಶ್ನೆಯನ್ನು ಮೊನ್ನೆ ನಾನು ಕಮಲಾಪತಿಯಾದ ಶ್ರಿಮನ್ ನಾರಾಯಣನನ್ನು ಕೇಳಿದ್ದೆನು. ಅದಕ್ಕೆ ಲೋಕರಕ್ಷಕನಾದ ಆ ಭಗವಂತನು ಕೊಟ್ಟ ಉತ್ತರವನ್ನೇ ನಿಮಗೆ ಹೇಳುವೆನು. ಚಿತ್ತಗೊಟ್ಟು ಕೇಳಿರಿ” ಎಂದು ಹೇಳಲು ಉಪಕ್ರಮಿಸಿದನು.
“ನಾನು ಒಮ್ಮೆ ಹೀಗೆ ಸಂಚರಿಸುತ್ತಿರುವಾಗ ಈ ಮೃತ್ಯು ಲೋಕದಲ್ಲಿ ಬ್ರಾಹ್ಮಣ ವರಗಳು ಕನ್ಯೆಗಳಿಗಾಗಿ ಬಹು ದು:ಖದಿಂದ ಬಳಲುತ್ತಿರುವದನ್ನು ಕಂಡೆನು, “ಸಜ್ಜನಸ್ಯ ಹೃದಯ ನವನೀತಂ” ಬೆಣ್ಣೆಯಂತಿರುವ ನನ್ನ ಹೃದಯವು ಕರಗಿ ಕಳವಳಗೊಂಡಿತು. ಆದಾವ ಉಪಾಯದಿಂದ ಈ ವರಗಳ ದು:ಖವು ದೂರಾಗುವದು ಎಂದು ಮನಮುಟ್ಟಿ ಚಿಂತಿಸಿ ‘ಪರವರಾನುಗ್ರಹ ಕಾಂಕ್ಷಯಾ’ಪರ ವರಗಳಿಗೆ ಹಿತಮಾಡಬೇಕೆಂಬ ಬಯಕೆಯಿಂದ ( ನಾ ಸ್ವತ: ವರವಿದ್ದಾಗೂ) ಶ್ರೀಮನ್ ನಾರಾಯಣನನ್ನು ಕೇಳಲು ವಿಷ್ನು ಲೋಕಕ್ಕೆ ಆತನನ್ನು ಸ್ತುತಿಸುತ್ತ ತೆರಳಿದೆನು. ನನ್ನ ಯಥಾರ್ಥವು, ಭಾವ್ ಪೂರ್ಣವೂ ಆದ ಸ್ತುತಿಯನ್ನು ಕೇಳಿ, ಶ್ರೀ ವಿಷ್ಣುವು
” ಏಲೈ ನಾರದ ! ನೀನು ಇಲ್ಲಿಗೆ ಆದಾವ ಕಾರ್ಯದ ಉದ್ಯೇಶವಾಗಿ ಬಂದಿರುವಿ? ನಿನ್ನ ಬಯಕೆ ಏನು? ಹೇಳು ಅದೆಲ್ಲವನ್ನು ನಾನು ಪುರೈಸುವೆ” ಎಂದನು. ಆಗ ನಾನು
“ಒಡೆಯನೆ! ಮೃತ್ಯುಲೋಕದಲ್ಲಿ ಕನ್ಯೆಗಳು ಕಾಣೆಯಾಗಿದ್ದು, ಬ್ರಾಹ್ಮಣ ವರಗಳೆಲ್ಲಾ ಕನ್ಯಾ ಕ್ಷಾಮದಿಂದ ಬಳಲುತ್ತಿದ್ದಾರೆ. ಕನ್ಯಾ ಪಿತೃಗಳು ತಮ್ಮ-ತಮ್ಮ ಕನ್ಯೆಯರ ಹರಾಜು ಮಾಡುವ ಪರಿಸ್ಥಿತಿ ಬಂದಿದೆ. ಆ ವರಗಳ ಕನ್ಯಾ ಪೈಪೋಟಿಯೂ ಯಾವ ಚಿಕ್ಕ ಉಪಾಯದಿಂದ ದೂರಾಗುವದೆಂಬುದನ್ನು ಹೇಳುವಂತನಾಗು” ಎಂದು ಕೇಳಿದೆನು.
“ಭಗವಾನ್ ಬ್ರಾಹ್ಮಚಾರಿ ಪ್ರಿಯ:” ಭಗವಂತನು ಬ್ರಾಹ್ಮಚಾರಿಗಳ ಮೇಲೆ ಪ್ರೀತಿಯುಳ್ಳವನು. ನನ್ನ ‘ಪರ-ವರಹಿತ’ ಬುದ್ಧಿಯನ್ನರಿತು “ವತ್ಸಾ ನಾರದಾ ! ಬ್ರಾಹ್ಮಣ ವರಗಳ ಮೇಲೆ ಅನುಗ್ರಹ ಮಾಡಬೇಕೆಂಬ ಬಯಕೆ ಇಂದ ಒಳ್ಳೆಯ ಪ್ರಶ್ನೆ ಮಾಡಿದೆ. ನಾನೂ ಅವರ ದಯನೀಯ ಸ್ಥಿತಿಯನ್ನು ನೋಡಿರುವೆ. ಏನು ಮಾಡುವದರಿಂದ ಬ್ರಾಹ್ಮಣ ವರಗಳು ಭೂಲೋಕದಲ್ಲಿ ದುಖಃ ಮುಕ್ತರಾಗಿ, ಕನ್ಯಾ ಕೃಪಾ ಕಟಾಕ್ಷಕ್ಕೆ ಒಳಗಾಗುವರು ಎಂಬುದನ್ನು ಹೇಳುವೆ ಕೇಳು. ಅದೊಂದು ಮಹತ್ಪುಣ್ಯಕರವಾದ ವ್ರತವಿದೆ. ಈ ವ್ರತವು ” ಸೌಭಾಗ್ಯ್ ಸಂತತಿಕರಂ ಸಾರ್ವತ್ರ ಭಾರ್ಯಾ ವಿಜಯ ಪದಂ” ವರಗಳಿಗೆ ಸೌಭಗ್ಯವನ್ನು, ಸಂತತಿಯನ್ನು ಕೊಡುವದಲ್ಲದೆ, ಸಂಸಾರದಲ್ಲಿ ಪತ್ನಿಗೆ ಗೆಲವು ದೊರಕುವದು. ನಾರದಾ ಕೇವಲ ನಿನ್ನ ಮೇಲಿನ ಪ್ರೀತಿಯಿಂದ ಅದು ಗುಪ್ತವಾಗಿದ್ದರು ಪ್ರಕಟಗೊಳಿಸುವೆ. ಅದು………..
” ರ್ರಿ…ರ್ರಿ….ಏಳ್ರಿ…ಎಷ್ಟ ಒದರಬೇಕರಿ, ಹತ್ತಸಲಾ ಆತು ಎಬ್ಬಸಲಿಕತ್ತ, ಅದರಾಗ ಸಂಡೆ ಇದ್ದರಂತು ಮುಗದ ಹೋತು” ಅಂತ ನನ್ನ ಹೆಂಡತಿ ಕಿವ್ಯಾಗ ಶಂಖಾ ಊದಿದ್ಲು. ನಾ ಗಾಬರಿ ಆಗಿ ಎದ್ದ ಕೂತೆ. ಅಯ್ಯೋ ಎಂಥಾ ಕನಸ ಇತ್ತು. ಇನ್ನೇನ ಜಗನ್ನಾರಾಯಣ ನಮ್ಮ ಪೈಕಿ ವರಕ್ಕ ಕನ್ಯಾ ಹೆಂಗ ಹುಟ್ಟಸಬೇಕು ಅಂತ ಹೇಳೊಂವ ಇದ್ದಾ ಅಷ್ಟರಾಗ ನನ್ನ ಜಗನ್ಮೋಹಿನಿ ಒದ್ದ ಎಬ್ಬಿಸಿ ಬಿಟ್ಟಳಲಾ ಅಂತ ಅಕಿ ಮ್ಯಾಲೆ ಸಿಟ್ಟ ಬಂತು.
” ಲೇ, ಏನ ಮನಷ್ಯಾಳ ಇದ್ದಿಲೇ, ಎಂಥಾ ಕನಸ ಬಿದ್ದಿತ್ತ, ಇನ್ನ ಎರಡ ನಿಮಿಷ ತಡಕೊಂಡಿದ್ದರ ಏನ ಆಗತಿತ್ತು” ಅಂತ ಅಕಿಗೆ ನನ್ನ ಕನಸಿನ ಕಥಿ ಹೇಳಿದೆ.
” ಭಾಳ ಶಾಣ್ಯಾರ ಇದ್ದೀರಿ ಏಳ್ರಿ, ‘ಊರ ಚಿಂತಿ ಮಾಡಿ ಮುಲ್ಲಾ ಸೊರಗಿದ್ದನಂತ’, ನಿಂಬದ ಒಂದ ಲಗ್ನಾ ಆಗೆದಿಲ್ಲೋ ಸಾಕ, ಅದ ರಗಡ ಆತು” ಅಂದ್ಲು.
ನಾ ಮತ್ತ ಚಾದರ ಮೈಮ್ಯಾಲೆ ಎಳ್ಕೋಂಡ ” ಅಯ್ಯೋ ನಾರಾಯಣ, ಹರಿ, ಲಗೂನ ಎದ್ದಿದ್ದಕ್ಕ ಕ್ಷಮಿಸಪ್ಪಾ. ಇದೊಂದ ಕೆಟ್ಟ ಕಮರ್ಶಿಯಲ್ ಬ್ರೇಕ್ ಅಂತ ತಿಳ್ಕೊ ಮತ್ತ ಕನಸನಾಗ ಬಾ ಪಾ. ಆ ವ್ರತಾ ಯಾವದು ಅಂತ ಹೇಳಿ ಪುಣ್ಯಾಕಟಕೊ ” ಅಂತ ಕೈ ಮುಗದ ಮುಸಕಹಾಕ್ಕೊಂಡ ಮಲ್ಕೊಂಡೆ.
ಮತ್ತ ಕನಸ ಬಿತ್ತ, ನಾರಾಯಣ ಕನಸಿನಾಗ ಬಂದ ಬಾಯಿ ತಕ್ಕೊಂಡ ಮಲ್ಕೋಂಡಿದ್ದ ನನ್ನ ಮಾರಿ ನೋಡಿ
“ವತ್ಸಾ, ಇದ ನಿಮ್ಮ ಪೀತ್ರಾರ್ಜಿತ ಕರ್ಮ. ಹಿಂದ ನಿಮ್ಮ ಪೂರ್ವಜರು ಬರೇ ಗಂಡ ಹಡದಿದ್ದಕ್ಕ ಈಗ ನೀವು ಅನುಭವಿಸಬೇಕಾಗೇದ. ಹಂಗ ಬ್ರಾಹ್ಮಣ ವರಗಳ ಹಣೆಬರಹದಾಗ ಕನ್ಯಾ ಸಿಗಲಿಕ್ಕೆ ಯಾ ಸುಡಗಾಡ ವ್ರತಾನೂ ಇಲ್ಲಾ. ನಾ ನಿನಗ ಸುಳ್ಳ ವ್ರತಾ ಅಂತ ಹೇಳಿ ಎಪ್ರಿಲ್ ಫೂಲ್ ಮಾಡಿದೆ, ಎದ್ದ ಹಲ್ಲು- ಮಾರಿತಿಕ್ಕೊಂಡ ಹಾಲ ತೊಗಂಡ ಬಾ ಹೋಗ ” ಅಂತ ಅಂದ ಮಾಯ ಆಗಿಬಿಟ್ಟ.
( ಎಪ್ರಿಪ್ ೧ರಂದು ಬರದಿದ್ದು )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ